ಜಾನಪದ ಕತೆಗಳೇ ನನ್ನ ಬರಹಕ್ಕೆ ಸ್ಫೂರ್ತಿ: ಕಟ್ಪಾಡಿ

ಜಾನಪದ ಕತೆಗಳೇ ನನ್ನ ಬರಹಕ್ಕೆ ಸ್ಫೂರ್ತಿ: ಕಟ್ಪಾಡಿ

(ಕೃಪೆ: ವಾರ್ತಾಭಾರತಿ,ಸೋಮವಾರ – ಜುಲೈ -14-2014)

‘ಸಾಹಿತಿಯ ಬದುಕು ಬರಹ’ ಸಂವಾದ ಕಾರ್ಯಕ್ರಮ
ಬೆಂಗಳೂರು, ಜು.13: ‘ತನ್ನ್ನನ್ನು ತಾನು ಅರಿತರೆ ದೇವರನ್ನು ಅರಿತಂತೆ’ ಎಂಬ ಯುಕ್ತಿ ನನ್ನ ಜೀವನದ ಪ್ರೇರಕ ಶಕ್ತಿಯೆಂದು ಹಿರಿಯ ಸಾಹಿತಿ ಪಕೀರ್ ಮುಹಮ್ಮದ್ ಕಟ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಶಿವರಾಮ ಕಾರಂತ ವೇದಿಕೆ ವತಿಯಿಂದ ಆರ್‌ಟಿ ನಗರದ ತರಳು ಬಾಳು ಮಠದಲ್ಲಿ ಆಯೋಜಿಸಿದ್ದ ‘ಸಾಹಿತಿಯ ಬದುಕು ಬರಹ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಅಜ್ಜಿ ಅರಿಬಿ ಹಾಗೂ ಮಲಯಾಳಂನಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಆ ಹಾಡನ್ನು ಕಥೆಯ ರೂಪದಲ್ಲಿ ನಮ್ಮಿಂದಿಗೆ ವಿವರಿಸುತ್ತಿದ್ದರು. ಇದೇ ನನಗೆ ಕಥೆ ಹಾಗೂ ಕಾದಂಬರಿ ಬರೆಯಲು ಪ್ರೇರಕ ಶಕ್ತಿಯಾಗಿರಬಹುದೆಂದು ಅವರು ಅಭಿಪ್ರಾಯಿಸಿದರು.
  ನನ್ನ ತಂದೆ ವೌಲ್ವಿಯಾಗಿದ್ದರೂ ಉಡುಪಿ ಜಿಲ್ಲೆಯ ಕಟ್ಪಾಡಿ ಗ್ರಾಮದ ಹಿಂದೂ ಕೇರಿಯಲ್ಲಿ ಮನೆ ಮಾಡಿದ್ದರು. ಇದರಿಂದ ಮೊಗವೀರ, ಬಿಲ್ಲವರು ಹಾಗೂ ಬ್ರಾಹ್ಮಣರ ಸಮುದಾಯದ ಜೊತೆ ಬೇರೆಯಲು ಅವಕಾಶವಾಯಿತು. ಅಮ್ಮನ ಬಳಿ ಎಲ್ಲ ಸಮುದಾಯದ ಮಹಿಳೆಯರು ಬಂದು ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದಳು. ಇವೆಲ್ಲ ವಿಷಯಗಳು ನನ್ನ ಕಿವಿಗೆ ಬೀಳುತ್ತಿತ್ತು. ಈ ವಿಷಯಗಳೆ ನನ್ನ ಸಾಹಿತ್ಯಕ್ಕೆ ಪ್ರೇರಕ ವಸ್ತುಗಳಾಗಿವೆ ಎಂದು ಪಕೀರ್ ಮುಹಮ್ಮದ್ ಕಟ್ಪಾಡಿ ತಿಳಿಸಿದರು.
ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿರುವ ನನ್ನ ತಾಯಿಯ ಕುಟುಂಬ ಜಮೀನ್ದಾರರಾಗಿದ್ದರು. ದೊಡ್ಡ ಹೆಂಚಿನ ಮನೆ, ಹತ್ತಾರು ದನ ಕರುಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಜೊತೆ ನಾನು ಹೆಚ್ಚಿನ ಕಾಲ ಕಳೆಯುತ್ತಿದೆ. ಹಾಗೂ ಅಜ್ಜಿ ಬಾರ್ಕೂರಿನ ಇತಿಹಾಸದ ಬಗ್ಗೆ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ಇವೆಲ್ಲಾ ದೃಶ್ಯಗಳನ್ನು ಕಥೆ ಹಾಗೂ ಕಾದಂಬರಿ ರೂಪದಲ್ಲಿ ವಿವರಿಸಿದ್ದೇನೆಂದು ಅವರು ನೆನಪು ಮಾಡಿಕೊಂಡರು.
ಪ್ರೌಢ ಶಿಕ್ಷಣಕ್ಕೆ ಪೇಟೆ ಶಾಲೆಗೆ ಸೇರುವವರೆಗೂ ನನಗೆ ಜಾತಿಯ ಭೇದ ಭಾವದ ಅನುಭವವಾಗಿರಲಿಲ್ಲ. ಆದರೆ, ಹೈಸ್ಕೂಲಿನಲ್ಲಿದ್ದ ಒಬ್ಬ ವಿದ್ಯಾರ್ಥಿ ಬ್ಯಾರಿ ಮುಸ್ಲಿಮರು ಅತ್ಯಂತ ಕೀಳು ಮಟ್ಟದ ಸಮುದಾಯವೆಂದು ಹೇಳುತ್ತಿದ್ದ. ಇದು ನನಗೆ ತುಂಬಾ ಮುಜುಗರ ತರಿಸುತ್ತಿತ್ತು ಎಂದು ಅವರು ಬೇಸರ ಪಟ್ಟರು.
ನಾನು ಜೀವನದಲ್ಲಿ ಕಂಡುಂಡು ಸಿಹಿ, ಕಹಿ ನೆನಪುಗಳು. ಜೀವನದ ಅನುಭವವನ್ನು ನೀಡಿದ ವ್ಯಕ್ತಿಗಳ ಒಟ್ಟು ಸಾರವಾಗಿ ನನ್ನ ಕಥೆ, ಕಾದಂಬರಿಗಳು ಮೂಡಿ ಬಂದಿವೆ. ಮುಖ್ಯವಾಗಿ ನನ್ನ ಅನುಭವಕ್ಕೆ ಬಂದ ಮುಸ್ಲಿಮ್ ಸಮುದಾಯದ ಬದುಕನ್ನು ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದೇನೆ. ಈ ಪ್ರಯತ್ನ ಮುಂದೆಯೂ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಸಾಹಿತಿ ಡಾ.ಚಂದ್ರಶೇಖರ ಚಡಗ ಉಪಸ್ಥಿತರಿದ್ದರು.

ನಿಮ್ಮ ಟಿಪ್ಪಣಿ ಬರೆಯಿರಿ